ಪ್ರತಿಭಾ ಪತ್ರಿಕೆ - ಜುಲೈ 2025

 
 

ಸಂಪಾದಕರ ಬರಹ

ಈ ಸಲದ ಸಂಚಿಕೆಯಲ್ಲಿ ನಾನು ಅನೇಕ ಚಿಕ್ಕ ಚಿಕ್ಕ ಹಾಸ್ಯಗಳನ್ನು, "ಜಯರಾಮನ ಜೋಕು" ಎಂಬುದಾಗಿ ಬರೆದು ಒಂದೊಂದು ವಿಭಾಗಗಳ ನಡುವೆ  ಹಾಕಿದ್ದೇನೆ. ಈ ರೀತಿ ನೀವೇ ಮಾಡಿದ ಚಿಕ್ಕ ಹಾಸ್ಯಗಳನ್ನು ಕಳಿಸಬಹುದು. ಆದರೆ , ಅಲ್ಲಿ ಇಲ್ಲಿ ಕೇಳಿದ್ದು, ಕಂಡಿದ್ದು , ನೋಡಿದ್ದು ಮಾತ್ರ ಬೇಡ. ನಿಮ್ಮದೇ ಒರಿಜಿನಲ್ ಇದ್ದರೆ ಮಾತ್ರ ಕಳಿಸಿ .

ಕವನಗಳನ್ನು ಅನೇಕ ಜನರು ಚೆನ್ನಾಗಿ ಬರೆದು ಕಳಿಸಿದ್ದೀರಿ. ಆದರೆ ಬಹುಮಾನ ಮಾತ್ರ ತುಂಬಾ ಚೆನ್ನಾಗಿರುವ ಒಂದೇ ಒಂದು ಕವನಕ್ಕೆ ಕೊಡಲಾಗಿದೆ. 

ಹೋದ ಸಂಚಿಕೆಯ ಚಿತ್ರಗಳನ್ನು ಬಿಡಿಸಿದ್ದ,ಅನೇಕ ಮಕ್ಕಳಿಗೆ ಆನ್ಲೈನ್ ಮೂಲಕ ಬಹುಮಾನಗಳನ್ನ ಕಳಿಸಲಾಗಿದೆ. ಅನೇಕರು ತುಂಬಾ ದೂರದಲ್ಲಿ ವೈಟ್ಫೀಲ್ಡ್ ಮುಂತಾದ ಕಡೆ ಇದ್ದು, ಬಹುಮಾನ ತೆಗೆದುಕೊಳ್ಳಲು ಬರುವುದು ಕಷ್ಟವಾಗಿದ್ದರಿಂದ ಈ ರೀತಿ ಮಾಡಲಾಗಿದೆ. ಎಲ್ಲರ ಭಾವಚಿತ್ರ ಹಾಗೂ ಹೆಸರುಗಳನ್ನು ಪ್ರಕಟಿಸಲಾಗಿದೆ.

ಮುಖ್ಯ ಸೂಚನೆ : ಎಲ್ಲಾ ಸ್ಪರ್ಧೆಯ ಉತ್ತರಗಳನ್ನೂ ನನ್ನ ಇಮೇಲ್ jayarambox@gmail.com ಗೆ ಕಳಿಸಿ . ಹಾಗೆ ಮಾಡಲು ಬಾರದಿದ್ದವರು ವಾಟ್ಸಪ್ ಗೆ ಕಳಿಸಿರಿ. ಟೈಪ್ ಮಾಡಲು ಬರುವವರೆಲ್ಲ ಟೈಪ್ ಮಾಡಿ ಕಳಿಸಿದರೆ ನನಗೆ ಬಹಳ ಅನುಕೂಲ . ಇಲ್ಲಿ ಭಾಗವಹಿಸಿರುವ ಎಲ್ಲರಿಗಿಂತ ಹಿರಿಯರಾದ ( 87 ವರ್ಷ ) ನನ್ನ ಮಾವನವರಾದ ಎಸ್ ವಿಠ್ಠಲ ರಾವ್ ಅವರು ,  ಎಲ್ಲವನ್ನೂ ಟೈಪ್ ಮಾಡಿ ಕಳಿಸುತ್ತಾರೆ ! ಅವರಿಗೆ ಧನ್ಯವಾದಗಳು 

ಪತ್ರಿಕೆಯನ್ನು ಪೂರ್ಣವಾಗಿ ಓದಿ ನಿಮ್ಮ ಅಭಿಪ್ರಾಯಗಳನ್ನು ಬರೆದು ನನಗೆ ಇಮೇಲ್ ಅಥವಾ ವಾಟ್ಸ್ ಅಪ್ ಗೆ  ಕಳಿಸಿದರೆ, ಅದರಂತೆ ಪತ್ರಿಕೆಯನ್ನು ಮಾರ್ಪಾಡು ಮಾಡಲಾಗುವುದು ಹಾಗೂ ನಿಮ್ಮ ಅಭಿಪ್ರಾಯಗಳನ್ನು ಮುಂದಿನ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ನಿಮ್ಮೆಲ್ಲರ ಸಹಾಯಕ್ಕಾಗಿ ಧನ್ಯವಾದಗಳು.


ಸೂಚನೆ : ಈ ಸಂಚಿಕೆಯ ಹಾಸ್ಯಗಳ ಹಾಗೂ ನನ್ನ ಲೇಖನಗಳ ಅನೇಕ ಚಿತ್ರಗಳನ್ನು AI ನಿಂದ, ಈ ಸಂದರ್ಭಕ್ಕಾಗಿಯೇ  ಮಾಡಿದ್ದೇನೆ - ಜಯರಾಂ ಎ ಎಸ್ - ಸಂಪಾದಕರು 

 

ನೀವೂ ವಿಶೇಷ ವ್ಯಕ್ತಿಯೇ ?

ಪ್ರತಿಭಾ ಪತ್ರಿಕೆಯಲ್ಲಿ ಪ್ರತಿ ತಿಂಗಳು ಒಬ್ಬ ವಿಶೇಷ ವ್ಯಕ್ತಿಯ ಬಗ್ಗೆ ಬರೆಯುತ್ತಿರುವುದು ನಿಮಗೆಲ್ಲ ತಿಳಿದೇ ಇದೆ ನೀವೂ  ಒಬ್ಬರು ಸಾಧಕರಾಗಿದ್ದರೆ, ನಿಮ್ಮ  ವಿಷಯವನ್ನು ತುಂಬಾ ಸಂಕ್ಷಿಪ್ತವಾಗಿ (ಸುಮಾರು  ಒಂದು ಪುಟದಷ್ಟು) ಈ ಕೆಳಕಂಡ ವಿಷಯಗಳ ಬಗ್ಗೆ ಎರಡೆರಡು ಸಾಲು ಬರೆದು ನನಗೆ ಕಳಿಸಿದರೆ, ನಿಮ್ಮನ್ನು ಈ ವಿಶೇಷ ವ್ಯಕ್ತಿ ಅಂಕಣದಲ್ಲಿ ಪರಿಗಣಿಸಬಹುದೇ ಎಂದು ನಾನು ಪರಿಶೀಲಿಸಲು ಅನುಕೂಲವಾಗುತ್ತದೆ 

ವಿಷಯಗಳು:

1) ನಿಮ್ಮ ಹವ್ಯಾಸಗಳು 

2) ನಿಮ್ಮ ಸಾಧನೆಗಳು 

3) ನಿಮಗೆ ದೊರೆತ ಸನ್ಮಾನ ಪುರಸ್ಕಾರಗಳು 

4) ಇನ್ನಿತರ ವಿಶೇಷ ವಿಚಾರಗಳು. 

ದಯವಿಟ್ಟು ಬರೆದು ಕಳುಹಿಸಿ.

ವಿಚಾರ -ಭಾಗ-2.

ಓತಿಕ್ಯಾತದ ಸ್ವಾರಸ್ಯಕರ ಘಟನೆ-  ಜಯರಾಂ ಎ ಎಸ್ 

ಇದು, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಸಹೋದ್ಯೋಗಿಯೊಬ್ಬರ ಜೀವನದಲ್ಲಿ ನಡೆದ ಘಟನೆ. 

ಅವರು ಬಹಳ ಮೃದು ಸ್ವಭಾವದವರಾಗಿದ್ದರು ಯಾರಿಗೂ ಮನಸ್ಸು ನೋಯಿಸದೆ ಕೆಲಸ ಮಾಡಬೇಕೆಂದುಕೊಂಡವರು ಪ್ರಾಣಿಗಳನ್ನೂ ಸಹ ಹಿಂಸೆ ಮಾಡದೆ ಮನಸ್ಸು ನೋಯಿಸದೆ ಇರಬೇಕೆಂಬ ಆಸೆ ಅವರದು. ಸದಾ ನಗುಮುಖದಿಂದ ಇರುತ್ತಿದ್ದರು .

ಒಂದು ದಿನ ಕಾಲೇಜಿಗೆ ಬಂದಾಗ ಸ್ವಲ್ಪ ಸಪ್ಪೆ ಮುಖ ಹಾಕಿಕೊಂಡು ಕೂತಿದ್ದರಿಂದ, ನಾನು "ಏನಾಯ್ತು " ಎಂದು ಕೇಳಿದೆ. ಆಗ ಅವರು ಹೇಳಿದ ಘಟನೆ ಈ ಕೆಳಗೆ ಕೊಟ್ಟಿದ್ದೇನೆ 

ಅವರು ಹೇಳಿದರು:

" ನಾನು ನಿನ್ನೆ ಭಾನುವಾರ ನಮ್ಮ ಹಳ್ಳಿಗೆ ಹೋಗಿದ್ದೆ. ಅಲ್ಲಿ ವಾಕಿಂಗ್ ಮಾಡುತ್ತಿದ್ದಾಗ, ದನಗಳು ನೀರು ಕುಡಿಯಲೆಂದು ಕಟ್ಟಿದ್ದ ಒಂದು ತೊಟ್ಟಿ ಹತ್ತಿರ ಹೋಗುತ್ತಿದ್ದೆ. ಆಗ ಒಂದು ಓದಿಕ್ಯಾತ ಆ ತೊಟ್ಟಿಯ ನೀರಿನಲ್ಲಿ ಬಿದ್ದು, ಪೂರ್ತಿ ಹೊರಬರಲಾಗದೆ ಒದ್ದಾಡುತ್ತಿತ್ತು. ತೊಟ್ಟಿಯಲ್ಲಿ ಮುಕ್ಕಾಲು ಭಾಗ ನೀರಿತ್ತು .ನಾನು ಸುತ್ತಮುತ್ತಲೂ ನೋಡಿ, ಅಲ್ಲೇ ಬಿದ್ದಿದ್ದ ಒಂದು ಸಣ್ಣ ಮರದ ಕೊಂಬೆಯನ್ನು ತೆಗೆದುಕೊಂಡು, ನಿಧಾನವಾಗಿ  ಆ ಓತಿಕ್ಯಾತವನ್ನು ತೊಟ್ಟಿಯ ಕಟ್ಟೆ ಮೇಲೆ ಬಿಟ್ಟೆ .ಅದು ಮೆಲ್ಲನೆ ನಡೆಯಲು ಶುರು ಮಾಡಿ, ನನ್ನ ಕಡೆ ನೋಡಿತು. ನನಗೆ ಬಹಳ ಖುಷಿಯಾಯಿತು. ಒಂದು ಪ್ರಾಣಿಯನ್ನು ರಕ್ಷಣೆ ಮಾಡಿದ್ದೇನೆ ಎಂದುಕೊಂಡೆ  ಅದೇ ಖುಷಿಯಲ್ಲಿ ಮನೆ ಕಡೆ ನಡೆದೆ. ಆದರೆ ನಾಕು ಹೆಜ್ಜೆ ಹೋದಮೇಲೆ ಓತಿಕ್ಯಾತ ಏನು ಮಾಡುತ್ತಿದೆ ಎಂದು ಹಿಂತುರುಗಿ ನೋಡುವ ಆಸೆಯಾಯಿತು. 

ಹಿಂತಿರುಗಿ ನೋಡಿದೆ .ಒಂದು ಕಾಗೆ ಬಂದು , ಓತಿಕ್ಯಾತವನ್ನು ಕಚ್ಚಿಕೊಂಡು ಹಾರಿಹೋಯಿತು. ನನಗೆ ಬಹಳ ಬೇಸರವಾಯಿತು" ಎಂದರು 

ಅವರು ಹೇಳಿದ್ದೂ ಕೇಳಿ ನನ್ನ ತಲೆಯಲ್ಲಿ ಅನೇಕ  ಯೋಚನೆಗಳು ಬಂದವು. 

-ಅವರು ಓತಿಕ್ಯಾತವನ್ನು ಎತ್ತದೆ ಇದ್ದಿದ್ದರೆ, ಅದೇ ಯಾವಾಗಲೋ ಕಷ್ಟಪಟ್ಟು ಹೊರಬಂದು, ಕಾಗೆಯಿಂದ  ತಪ್ಪಿಸಿಕೊಳ್ಳುತ್ತಿತ್ತೇ?

- ಅವರು ಅದನ್ನು ಎತ್ತಿ, ತೆಗೆದುಕೊಂಡು ಹೋಗಿ ಯಾವುದಾದರೂ ದೂರ, ಕಾಗೆಗೆ ಕಾಣದ ಜಾಗದಲ್ಲಿ ಬಿಡಬೇಕಿತ್ತೇ? 

- ಅವರು  ಹಿಂತಿರುಗಿ ನೋಡದೆ ಮನೆಗೆ ಹೋಗಿದ್ದಿದ್ದರೆ, ಈ ವಿಚಾರವೇ ಅವರಿಗೆ ತಿಳಿಯುತ್ತಿರಲಿಲ್ಲ. ಅವರು  ಹಿಂತಿರುಗಿ ನೋಡಿದ್ದೇ ತಪ್ಪೇ?

- ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ, ಕೆಲಸ ಮಾಡುವುದು ಮಾತ್ರ ನಮ್ಮ ಅಧಿಕಾರ ಫಲಾಫಲಗಳು ದೇವರಿಗೆ ಬಿಟ್ಟಿದ್ದು ಎಂದು ಸುಮ್ಮನಿರಬೇಕೇ?  

- ಪ್ರಕೃತಿಯಲ್ಲಿ ಒಂದು ಪ್ರಾಣಿ ಇನ್ನೊಂದರ ಆಹಾರವಾಗುವುದು ಸಹಜ ಧರ್ಮ ಎಂದು ಕೊಳ್ಳಬೇಕೆ?  

- ಇದರ ಬಗ್ಗೆ ಯೋಚನೆ ಮಾಡಿ ತಲೆ ಕೆಡಿಸಿಕೊಳ್ಳದಿರುವುದೇ ಸರಿಯೇ? "

ಈ ವಿಷಯದ ಬಗ್ಗೆ, ನಿಮ್ಮ ಅಭಿಪ್ರಾಯವನ್ನು 8-10 ಸಾಲಿನಲ್ಲಿ ಬರೆದು ಕಳಿಸಿ.

 
 
 

ಮೇ ಸಂಚಿಕೆಯ ಬಹುಮಾನ ವಿಜೇತರು 

10 ರಿಂದ 16 ವರ್ಷದ ವಿಭಾಗದಲ್ಲಿ ಬಹುಮಾನ : ಆದಿತ್ಯ 

ಅಭಿನಂದನೆಗಳು  

 

10 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಬಹುಮಾನ :

ಪಾರ್ಥ ಯಾದವ್ ಎಸ್ 

ಅಭಿನಂದನೆಗಳು 

ಉಳಿದ ಎಲ್ಲಾ ಮಕ್ಕಳಿಗೂ ಸಮಾಧಾನಕರ ಬಹುಮಾನ. ಈ ಬಹುಮಾನಗಳನ್ನು  ನನ್ನ ತಾಯಿ , ಶ್ರೀಮತಿ ಸುಬ್ಬಲಕ್ಷ್ಮಿ ಸೂರ್ಯನಾರಾಯಣ ರಾವ್  ಅವರು ಕೊಟ್ಟಿದ್ದಾರೆ . ಅವರಿಗೆ ವಿಶೇಷ ಧನ್ಯವಾದಗಳು. 

ದ್ಯುತಿ ಶಿರೀಶ್ 

ಅಥರ್ವ ಎಸ್ 

ಅಮೂಲ್ಯ 

ನಿಶ್ಚಯ್ ಪಿ ಎಂ 

ವಚನಾ ಡಿ ಎಂ 

ರಿದ್ದಿ ಯಾದವ್ 

ಅವ್ನಿ  

ಅನಘ 

 

ವಿಭಾ ಆತ್ರೇಯ 

 ಎಲ್ಲರಿಗೂ ಅಭಿನಂದನೆಗಳು 

ಮಳೆಗಾಲದ ಕವನಗಳು  

1. ಮಳೆ ಬಂತು ಮಳೆ:

ರಚನೆ: ವಿಠಲ್ ರಾವ್.

ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ.

ಶಾಲೆಗೆ ಹೋಗ್ಬೇಕು ತಡೀಬ್ಯಾಡ ಬಿಡೇ.

ದಾರಿಲಿ ಕಂಡೆನು ಹಾವಿನ ಹೆಡೆ.

ಹೌಹಾರಿದೆನು ಆ ಕಡೆ

ಇದನು ಕಂಡ ಹೆಗಡೆ,

ಬಾ ಎಂದನು ಈ ಕಡೆ.

ಶಾಲೆಯಿಂದ ಬಂದು ಆಡಿದೆವು ಪಗಡೆ,

ಇಟ್ಟುಕೊಂಡು ಕವಡೆ.

ಅಮ್ಮ ಮಾಡಿದ್ದಳು ಆಂಬೊಡೆ

ತಿಂದೆವು ಅದನ ಕಂಡೊಡೆ

ಅಮ್ಮನು ನಕ್ಕಳು ಒಂದೆಡೆ.

ಹೊರಟೆವು ಆಗ ಆಡಲಿಕ್ಕೆ ಹೊರಗಡೆ. ಪುನಹ ಮಳೆ ಬಂತು ಮಳೆ ಮನೆ ಕಡೆ ನಡೆ.

2.ಮಳೆಯ ವೇಳೆ :ರಚನೆ : ಆನಂದ್ ಎಸ್ ಬಿ 

ಕೇಳೆ ಮಗಳೆೇ………………

ಸುರಿಯಿತು ಮಳೆ,ತೊಳೆಯಿತು ಇಳೆ

ಹರಿಯಿತು ಹೊಳೆ,ಹೋಯಿತು ಬೆಳೆ

ಸರಿಯಿತು ಕೊಳೆ,ತಗ್ಗಿತು ಗುಳೆ

ಎಳೆ ಬಾಳೆಗೆ ಬಂದಿತೊಂದು ಕಳೆ 

ಕಾಲುವೆ ಆಯಿತು ನಾಣಿಮನೆ ಓಣಿ

ಕಾಗದದ ದೋಣಿ ಹರಿಬಿಟ್ಟಳು ವಾಣಿ

ಅಜ್ಜಿ ತಂದಿಟ್ಟರು ಬಿಸಿ ಬಿಸಿ ಪೇಣಿ

ಸವಿದರು  ಈ ಓಣಿಯ ರಾಜ-ರಾಣಿ

ಹುಡುಕಿದರು ತಾತ ಕೋಟು ಛತ್ರಿ,

ತೊಟ್ಟಿದ್ದರು ಕೋಟು,ಹಿಂದೆಯೇ ಛತ್ರಿ ಇತ್ರಿ

ಕೂಗಿ ಹೇಳಿದರು ವಾಪಸ್ಸಾಗಬಹುದು ರಾತ್ರಿ

ಊಟಕ್ಕೆ ಬರ್ತೀರ ತಾನೆ ಅಜ್ಜಿ ಮಾಡಿಕೊಂಡ್ರು ಖಾತ್ರಿ

ಮಳೆಯಿಂದ ಸೀನನಿಗೆ ಸೀನು,

ಸೀತಾಳಿಗೆ ಶೀತಾ,ಕೇಶವನಿಗೆ ಕೆಮ್ಮು

ದಮಯಂತಿಗೆ ದಮ್ಮು

ಪಾಪುಗೆ ಜ್ವರ,ಹೊರಬರುತ್ತಿಲ್ಲ ಸ್ವರ

ಒಣಗುತ್ತಿಲ್ಲ ಬಟ್ಟೆ,ನಿನ್ನೆದೇ ತೊಟ್ಚೆ

ಏನಾದರೂ ಮಳೆಗಾಲವೇ ಬಲು ಮಜ

ಏಕೆಂದರೆ ನಮಗೆ ಸಿಗುತ್ತಿತ್ತು ಮೂರ್ನಾಲ್ಕು ದಿನ ಶಾಲೆಗೆ ರಜ.

 
 

3. ಮರೆವಿನ ಖಯಾಲಿಯಿರಲಿ ಮಳೆಗಾಲ ನಿನಗೆ:  ರಚನೆ : ಶ್ರೀ ಶಿವಪ್ರಸಾದ್ ಸೂರ್ಯ .

ಮೇಲೆ ಇರುವ ನೀರು,

ಬಾನು ಬಿಟ್ಟು ಜಾರು

ಭುವಿಯ ನೀನು ಸೇರು,

ಚಿಗುರೆ ಧರೆಯ ಬೇರು.

ಜಗದ ಸೃಷ್ಟಿ ಮೇರು ,

ಚಲಿಸುವುದು ಸೃಷ್ಟಿ ತೇರು

ಮನದಂಗಳ , ಮನೆಯಂಗಳ ಜಿಗಿಜಿಗಿದು ಬಾಳು

ಗಗನದಿಂದ ಹರಿದು ಕಾನಬದಿ ಸುಳಿದು

ಹೊಸತನವ ಬೀರುತ್ತ, ನಲುಮೆ ಯುಗಕೆ ತೋರು.

ಮಣ್ಣು ಇಲ್ಲಿ ತಣಿಯುತಿಹುದು ದಣಿವಿನಲ್ಲಿ ಕುಣಿದು

ಧರೆಯು ತನ್ನ ಹಾದಿ ನೆನೆದು ಬರಸೆಳೆದಿದೆ ಕರೆದು

ಭತ್ತ ಬಿತ್ತಿ, ಕಬ್ಬು ನೆಟ್ಟು ತೆಂಗು ಬಾಳೆ ತೂಗೆ

ಹರುಷದೊಂದು ಹೊನಲು ಹರಿದು ಗಿಡಗಳೆಲ್ಲ ಬಾಗೆ

ಹಕ್ಕಿ ಹಾಡಿ, ಪ್ರಾಣಿ ತೇಗಿ ಜಗದ ನೋವು ನೀಗಿ

ಜಲದ ಸೆಲೆಯು, ಹಸಿರ ಕಳೆಯು ನಳನಳಿಸಿದೆ ಇಳೆಯು

ಹೂವಿನ ಕಣವೆಲ್ಲ ದುಂಬಿಗಳ ಮನೆಯಾಯ್ತು

ಹಸಿರುಟ್ಟು ಬೆಳೆತೊಟ್ಟು ಧರೆಯಾಯ್ತು ವಧುವು

ಸುರಲೋಕ ಮನಸೋತು ತಲುಪಾಯ್ತು ಧರೆಯ

ಕಾರಿರುಳ ಕಳಚಿಟ್ಟ ಕತ್ತಲೆ ಸೂಸಿತೊಂದು ಸುಧೆಯ

ಮಳೆಯಿಲ್ಲಿ ಹನಿದಿದೆ, ಮನೆಯಿಂದು ತಣಿದಿದೆ

ಇದು ಧರೆಯ ಹಬ್ಬ, ಜೀವಜಾಲದ ಮೆರುಗು ಈ ಸಗ್ಗ.

ಖಯಾಲಿಯೊಂದಿರಲಿ ಮಳೆಗಾಲ ನಿನಗೆ ಮರೆವಿನದು

ಬಾಡಿಸಿ ಕಾಡಿಸುವ ಧಗೆ ನಿನಗೆ ನೆನಪಾಗದಿರಲಿ

ಮಕ್ಕಳ ಸಂತಸ, ದೋಣಿಗಳ ಕೂಟ ಜಲಪಾತದೂಟ

ಎಂದೆಂದಿಗೂ ಇರಲಿ ಚಿರಕಾಲವಿರಲಿ

ಹೊರಟು ಹೋಗುವ ಮನವ ಮಾಡದಿರು

ಜೀಕಿ ಬಳುಕುತ್ತ ಜ್ವಲಿಸುತ್ತಲಿರು ಜಗಕೆ.

 
 

4. ಮಳೆಗಾಲದ ಕವನ : ರಚನೆ: ಶ್ರೀ ಕೆ ವಿ ಜಯರಾಂ 

ಮಳೆ ಬಂತು ಮಳೆ ಎಲ್ಲೆಲ್ಲೂ ಮಳೆ

ರಾಯರು ಹಿಡಿದರು ಆಫೀಸಿಗೆ ಕೊಡೆ

ಅಮ್ಮ ಮಾಡಿದರು  ರುಚಿ ರುಚಿಯಾದ ಕೊಡುಬಳೆ

ತಿಂದವರೆಲ್ಲ ಬಾಯಿ ಚಪ್ಪಡಿಸಿದರು ಭಲೇ ಭಲೇ 

ಮಕ್ಕಳೆಲ್ಲ ಕುಣಿದರು ರಗಳೆಯೋ ರಗಳೆ 

"Rain rain go away "

ರೈತರು ಖುಷಿಪಟ್ಟರು ಒಳ್ಳೆ ಬೆಳೆ

ಸಾಕಾಯಿತು ಸಾಮಾನಿನ  ಅಸಾಧ್ಯ ಬೆಲೆ

ಬೆಂಗಳೂರು ರಸ್ತೆ ಹಾಳಾಯಿತು ಎಲ್ಲಾ ಕಡೆ

ಜನ ಮತ್ತೊಮ್ಮೆ ಬೈದರು ಯಾವಾಗ ಇದರ ಕೊನೆ

ಈ ಜನ್ಮದಲ್ಲಿ ಸಾಧ್ಯವಿಲ್ಲ ಎಂದರು ಸಂಘಟನೆ

ಮಂತ್ರಿಗಳು ಅಂದರು ಇದು ಹಿಂದಿನ ಸರ್ಕಾರದ ಹೊಣೆ

ರಾಯರು ಮಡದಿಗೆ ಅಂದರು ಇದೇ ಹಣೆ ಬರಹ ಕಣೆ!

 
 

5. ಮುಂಗಾರಿನ ಮಳೆಯಲಿ  ಸಾಗುವ ಈ ಇಳೆಯಲಿ :ರಚನೆ : ಶ್ರೀಮತಿ ರಾಜೇಶ್ವರಿ ನಾಗರಾಜ್ .

ಮಳೆ ಬಂತು ಮಳೆ

ಕೊಡೆ ಹಿಡಿದ ನಡೆ ||

ತಂಪು ತಂಪು ಎಳೆ

ಹಸಿರು ಹಸಿರು ಬೆಳೆ ||

ಚಿಲಿಪಿಲಿ ಹಕ್ಕಿಗಳ  ಗಾನ

ಕಲರವ  ಚೇತನ ||

ತೋಟಕೆ ಹಸಿರು

ಮನೆಕೆ ಮೆಲ್ಲುಸಿರು ||

ಮಿತವಾಗಿ ಸುರಿದರೆ ಹಬ್ಬ

ಮಿತಿಮೀರಿದರೆ ಅಬ್ಬಬ್ಬ ||

ಮೊದಲ ಮಳೆಯ ಸುಗಂಧ

ಅನುಭವಿಸಲು ಆನಂದ ||

ಮುಂಗಾರಿನ ಮಳೆಯಲಿ 

ಸಾಗುವ ಈ ಇಳೆಯಲಿ ||

 
 

6. ಭೂಮಿಗೆ ಬಿದ್ದ ಮೊದಲ ಮಳೆ : ರಚನೆ : ಶ್ರೀಮತಿ ಸುಮಾ ಆನಂದ್ 

ಭೂಮಿಗೆ ಬಿದ್ದ ಮೊದಲ ಮಳೆ

ತಂದಿತು  ನಾಸಿಕಕೆ ಸುವಾಸನೆಯ ಹೊಳೆ || 1 ||

ಹಸಿರುಟ್ಟು  ನಲಿದಳು ಭೂಮಿ

ನೋಡಿದಷ್ಟು ಮುದವೆನಿಸುವ  ಪ್ರೇಮಿ|| 2 ||

ರವಿಯ ತಾಪದಿಂದ  ಬಳಲಿದ ಇಳೆಗೆ

ವರ್ಣನ ಚಿಂಚನವೇ ಔಷಧಿ || 3 || 

ಮಳೆಗಾಲದಲ್ಲಿ ಬೆಂಗಳೂರು

ಆಗುವುದು ನೀರಿನೂರು || 4 ||

ಎಲ್ಲೆಲ್ಲೂ ದೋಣಿಗಳ ಕಾರು ಬಾರು 

ಮಳೆ ನಿಂತ ಮೇಲೆ ಸೊಳ್ಳೆಯ ಶಿಳ್ಳೆ ...ಶಿಳ್ಳೆ... ಶಿಳ್ಳೆ...|| 5 ||

 
 

7. ಮಳೆಗಾಲದ ಕವನ : ರಚನೆ : ಶ್ರೀಮತಿ ಪದ್ಮ ಆರಾಧ್ಯ 

ಮಳೆ ಬಂತು ಮಳೆ

ತೊಳೆಯಿತಲ್ಲ ಕೊಳೆ

ಹಸಿರಾಯಿತು  ಬೆಳೆ

ಹೊಳೆಯಿತು ರೈತ ನ ಮುಖದ ಕಳೆ

ಬಾನಂಗಳದಲ್ಲಿ ಗುಡುಗು  ಸಿಡಿಲಿನಾ  ಮಳೆ

ಹಲ್ಲಕೊಳ್ಳಗಳಲಿ ಸುಳಿ ಸುಳಿದು ಬಂದಿತಾಮಳೆ 

ಭೋರ್ಗರೆವ ಸಾಗರದ ಆರ್ಭಟ

ಯುವಜನರ ಆನಂದದ ಚೆಲ್ಲಾಟ

ಜಲಪಾತ ದಿಂದ ದುಮ್ಮಿಕ್ಕಿದ ಮಳೆ 

ಜನಮನ ತಣಿಸಿ ಕುಣಿ ಕುಣಿದ ಮಳೆ

ನಯನ ಮನೋಹರವಾದ ಜಲಪಾತ

ಯುವಜನರ ಮನ ದಣಿಸುವ ಜಲಪಾತ

ಹಸಿರು ಹಸಿರಾದ ಹೊಲಗದ್ದೆಗಳ  ನೋಡಲೆಂತಹ ಮನೋಹರ

ಈ ದೃಶ್ಯ ಮಳೆಯ ನಲಿವು ನಾಟ್ಯವೇ ನಯನಮನೋಹರ

ಮಳೆಯಿಂದಾಗುವುದು ಅದೆಷ್ಟೋ ನಲಿವು

ಅಷ್ಟೇ ಭಯಂಕರ ಸಂಕಟದ ಸುಳಿವು 

ನೂರಾರು ಸಾವಿರಾರು ಜನರ ದುರ್ಮರಣದ ಓಟ 

ಹೃದಯ ವಿದ್ರಾವಕದ ನೋಟ

ಓ ಮಳೆಯೇ ನೋವು ನಲುವಿನ ನಾಟ್ಯ ಮಯೂರಿ

ಬಾಬಾ ಸಂತಸ ನೀಡು  ಜನಮನಕ್ಕೆ

ಬೇಡುವರು ನಿನ್ನ ಕಾಲೂರಿ

 
 

8. ಮಳೆಗಾಲದ ಕವನ : ರಚನೆ : ಡಾ|| ಎ ಎಸ್  ಚಂದ್ರಶೇಖರ್ ರಾವ್ 

ಗುಡುಗು ಸಿಡಿಲು ಶಬ್ದದೊಡನೆ

ದಡ ದಡನೆ ಸುರಿಯುತ್ತಿದೆ ಈ ಮಳೆ

ದಡ ಮೇರುತಿದೆ ಕೆರೆ ಕಟ್ಟೆ ನದಿಗಳು

ಗಿಡಮರಗಳು ಬೀಳುತ್ತಿವೆ ದರೆ ಎಡೆಗೆ || 1||

ಪ್ರಳಯವೋ ಇಳೆ  ಮುಳುಗಿತೋ ಮಳೆಗೆ

ಗೋಳಾಡಿ ಗಡಗಡ ನಡುಗುತ್ತಿದೆ ಜನತೆ

ಹಳೆ ಮನೆ ಮಠ ಕೊಚ್ಚಿ ಹೋದವು ಮಳೆಗೆ

ಮುಳುಗಿದವು ರಸ್ತೆ ಸೇತುವೆಗಳು ನೀರಲಿ. || 2 ||

ಆನೆಕಲ್ಲುಗಳ ಸುರಿಯುತ್ತಿವೆ ರಾಶಿ ರಾಶಿ

ಬಾಲಕರು ಆಯುತಿಹರು  ಆಳಿಕಲ್ಲುಗಳ 

ಎಲ್ಲೆಲ್ಲಿ ನೋಡಿದರೂ ನೀರು ನೀರು

ತಲ್ಲಣಿಸಿದರು ಜನರು ಈ ಮಳೆಗೆ  || 3 ||

ಬಣ್ಣ ಬಣ್ಣದ ಕೊಡೆಗಳ ವೈಯಾರದಿ ಹಿಡಿದು

ಹೆಣ್ಣು ಮಕ್ಕಳು ಬಂದರು ಬೀದಿಯಲ್ಲಿ

ಅಣ್ಣ ಸೂರ್ಯನು ಚೆಲ್ಲಿದ ಬೆಳಕ ನಭದಲಿ

ಬಣ್ಣ ಏಳರ ಮಳೆಬಿಲ್ಲು ಮೂಡಿತು ಗಗನದಲಿ  || 4 ||

ಬೆಳೆಗಳು ಬೆಳೆದವು ರೈತರ ನೆಲದಲ್ಲಿ

ಎಳೆ ಮಕ್ಕಳು ಕಾಗದ ದೋಣಿಗಳ

ಮಳೆ ನೀರಲ್ಲಿ ಬಿಟ್ಟು ನಲಿ ನಲಿದರು

ಇಳಿಗೆ ತಂದಿದೆ ಸಂತಸ ಈ ಮಳೆ || 5 ||

ಡಾ|| ಎ ಎಸ್  ಚಂದ್ರಶೇಖರ್ ರಾವ್ ಅವರಿಂದ ಅವರ ಕವನದ ಬಗ್ಗೆ :

ಈ ಕವನದ ವಿಶೇಷತೆ : ಮೊದಲ ಮೂರು ಪದ್ಯ ಮಳೆಯ ಭೀಕರತೆಯನ್ನು  ವಿವರಿಸುತ್ತದೆ .ಕೊನೆಯ ಎರಡು ಪದ್ಯ ಮಳೆ ಉಪಯೋಗ, ಹೆಂಗಳೆಯರಿಗೆ ಮಕ್ಕಳಿಗೆ ರೈತರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸುವವರಿಗೆ ಎಲ್ಲ ವರ್ಗದ ಜನರಿಗೆ ಮಳೆ ಉಪಯೋಗ ತಿಳಿಸುತ್ತದೆ.

 

9. ಮಳೆ ! ರಚನೆ : ಶ್ರೀಮತಿ ಸೌಮ್ಯ ನಾಗರಾಜ್ .

ಮಳೆ ಬೇಕು ಹಲವರಿಗೆ ಬೇಡ ಕೆಲವರಿಗೆ

ಅಲ್ಲೊಬ್ಬನಿಗೆ ಬೇಕು ಸಾಲ ಮಾಡಿ ಬೆಳೆದ ಬೆಳೆಗೆ|

ಇನ್ನೊಬ್ಬನಿಗೆ ಬೇಡ ಸಾಲ ಮಾಡಿ ಮಾಡುತ್ತಿರುವ ಮಗಳ ಮದುವೆ

ನೆಂದು ಒದ್ದೆಯಾಗುವ ಗುಬ್ಬಚ್ಚಿ ಮಳೆಗಾಗಿ ಕಾಯುತ್ತಿರುವ ಜಾತಕ ಪಕ್ಷಿ || 1 || 

ಮಳೆ ಬಂದರೆ ಮಕ್ಕಳಿಗೆ ರಜಾ ಶಾಲೆಯಿದ್ದರೂ ಮಜಾ

ಒಂದೇ ಕೋಡೆಯಡಿ ಗೆಳೆತಿಯರೊಟ್ಟಿಗೆ ಹೋದದ್ದೆ |

ಪುಸ್ತಕದ ಬ್ಯಾಗು ಜೋಕೆ ! ಎಲ್ಲರ ಭುಜ, ತಲೆಗಳು ಒದ್ದೆ 

ಹರಿವ ನೀರಲಿ ಕಾಗದದ ಹಡಗು ಕೊಚ್ಚೆ ಬೂಟುಗಳ ತೊಳೆಯಲು ಬೆರಗು|| 2 ||

ಸಂಜೆ ಮನೆಗೆ ಬಂದು ಬಿಸಿ ತಿಂಡಿ ಕೊಡುಬಳೆ

ವರ್ಷ ಬಿಡಿ ಹೀಗೆ ಬರುತ್ತಿರ ಬಾರದೇ ಈ ಮಳೆ ? |

ಒದ್ದೆ ಬಟ್ಟೆ, ಮನೆಯಲ್ಲಿ ಕೊಚ್ಚೆ , ಬಳಲಿದೆ ತಾಯ ಬಯಕೆ

ಈ ಮಳೆ ಮಧ್ಯಾಹ್ನ ಓ ರಾತ್ರಿ ಬರಬಾರದೇಕೆ ? || 3 ||

ನವಜೋಡಿ ರಸ್ತೆಯಲ್ಲಿ ಮಳೆಯಲ್ಲಿ ಚಳಿಯಲಿ

ಬೆಚ್ಚಗಿನ ಅಪ್ಪುಗೆಯ ನಡುವೆ ಜಿಗಿದ ಬೈಕಿನಲಿ |

ಸ್ವರ್ಗ ಮೂರೇ ಗೇಣೇಂಬ ಮೋಹದಾ ಮೋದದಲಿ 

ಮಳೆ ನಿಲ್ಲದಿರಲಿ ಮುಗಿಯದಿರಲೆಂಬ ಹುಚ್ಚು ಹಂಬಲದಲಿ || 4 ||

ವೃದ್ಧ ದಂಪತಿಗೆ ಬೆಚ್ಚನೆಯ ಸ್ವೆಟರು, ಟೊಪ್ಪಿಗೆ

ಒಳಗೆ ಚಳಿ ಹೊರಗೆ ಹೋಗಲಾಗದು ಸ್ನೇಹಿತರೊಂದಿಗೆ |

ಬಿಸಿ ಬೋಂಡ ಕೊಡಬಾರದೇ ಸೊಸೆ ಎಂಬ ಚಪಲ ನಾಲಿಗೆಗೆ

ಮಗ ಕ್ಷೇಮದಿಂದ ಬರಲಪ್ಪ ,ಬಿಸಿಲು ಚಳಿ ಇರಲಿ ಮಳೆಗಾಲ ಬೇಡಪ್ಪ || 5 ||

ಬಯಕೆಗಳದೆಷ್ಟೋ ಕಾರಣಗಳೆದೆಷ್ಟೋ

ಮಳೆ ಕೇಳಿ ಬರುವುದೇ ಯಾವಾಗ ಎಲ್ಲಿ ಬರಲೆಂದು ? |

ಬೇಕೇ ಬೇಕಲ್ಲವೇ ಮಳೆ ? ಮಳೆ ಬಂತು ಮಳೆ,

ಮಿಂದು  ಹರ್ಷದಿ ನಲಿಯಿತು  ಇಳೆ || 6 || 

 
   

10. ಸಿಯಾಟಲ್ ‘ಹನಿ’ ಕವನಗಳು - ರಚನೆ : ಶ್ರೀ ಎನ್ ಗಿರೀಶ

ಬಂದೆ ಸಿಯಾಟಲ್ ಗೆ ನೋಡಲು ರೇನಿಯರ್ 

ಮಬ್ಬಿನಲಿ ಕಾಣದೆ ತಿಳೀತು - ಈ ಊರು ರೇನಿಯೆಸ್ಟ್

rain ಇದ್ರೇನು ಇರ್ಲಿ ಬಿಡಿ

ನೆನ್soak ಇದ್ಯಲ್ಲ Rainerರೂನು ಇಡಿ 

 

ಹೆಂಡತಿಗೆ ಹೇಳಿದೆ - ಕೊಡೆ ಮಳೆ ಕವನಕ್ಕೆ ಸ್ಫೂರ್ತಿ

ದಬ್ಬಿದಳು ಆಚೆ - ಕೊಡೆಯಿಲ್ಲದೆ ನೆಂದೆ ಪೂರ್ತಿ

ಬಿಸಿಲಾದರೇನು ಮಳೆಯಾದ Rain u

ಕೊಡೆಯಾಗಿ ಎಂದೂ ನಾನಿಲ್ಲವೇನು …

ಎಮ್ಮೆ ಮೇಲೆ ಮಳೆ…

ನಾನು - Rain Rain go away

Rainಉ - ಗೋವ್ಗ್ಳು ಇಲ್ಲ ಬರೆ ಎಮ್ಮೆಗ್ಳವೆ

 

 ಸಿಯಾಟಲ್ Washing-ton ನಲ್ಲ್ಯಾಕಿದೆ, ಮಗಳೆ?

ಇಲ್ಲೆ ಬರೋದು ಅಪ್ಪಾ ಜ್ಯಾದಾ ಧೋನೆ ಕೇಲಿಯೆ ಧೋ ಧೊ ಮಳೆ

ಒಂದೇ ಋತು ಸಿಯಾಟಲ್ ನಲ್ಲಿ 

ಇರತ್ತೆ ಇಡೀ ‘ವರ್ಷ’ - ಆಕಾಶ ತೂತು ನಲ್ಲಿ

ಬಹುಮಾನ :

ಎಲ್ಲ ಕವನಗಳನ್ನು ಪರಿಶೀಲಿಸಿದ ಮೇಲೆ ಶ್ರೀಮತಿ ಸೌಮ್ಯ ನಾಗರಾಜ್ ಅವರ ಕವನ ತುಂಬಾ ಚೆನ್ನಾಗಿದೆ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇನೆ. ಈ ಕವನದಲ್ಲಿ ಒಂದು ಚಿಕ್ಕ ಮಗುವಿನಿಂದ ಹಿಡಿದು ಮುದುಕರವರಿಗೆ ಹಾಗೂ ಒಬ್ಬ ಮಗಳ ಮದುವೆ ಮಾಡುವವನಿಂದ ಹಿಡಿದು ರೈತನವರಿಗೆ ಎಲ್ಲರ ದೃಷ್ಟಿಯಲ್ಲೂ ಮಳೆ ಬಗ್ಗೆ ಬರೆಯಲಾಗಿದೆ, ಹಾಗೂ ಎಲ್ಲರ ಮನಸ್ಸಿನ ಭಾವನೆಗಳನ್ನು ಅದರಲ್ಲಿ ಬಿಂಬಿಸಲಾಗಿದೆ.

ಶ್ರೀಮತಿ ಸೌಮ್ಯ ನಾಗರಾಜ್ ಅವರಿಗೆ ಅಭಿನಂದನೆಗಳು.

 
 

ಈ ಸಂಚಿಕೆಯ ಬಹುಮಾನಿತ ಸ್ಪರ್ಧೆ - 12 ಪದಬಂಧಗಳು 

1) ಮಂದಿಯ ಪ್ರೀತಿ ಹೊಂದಿರುವವನು ಪ್ರಜೆಗಳ ಪ್ರಿಯ 

2)  ಆರಂಭ, ಶುರು 

3)  ಆಯಾಸ ಸುಸ್ತು

 
 

B

1) ಪದ್ಮಾಸನ 

2) ಸಂತಸ, ಉಲ್ಲಾಸ, ಲ್ಲಲ್ಲೇ , ಸರಸ. 

3) ನಿಬಿಡತೆ ,ಸಾಂದ್ರತೆ.

 
 

C

1) ಈಡೇರದ ಆಸೆ, ಆಸೆಗಳ ಲಹರಿ 

2)  ಭುಜ , ಏಣು 

3)  ಕೊಲ್ಲುವಿಕೆ,ವಧೆ.

 
 

1) ಷಣ್ಮುಖ, ಒಂದು ಬಗೆಯ ಕೇತನ ಲಾಂಛನ 

2)  ಕಾಂತಿ,ಹೊಳಪು ,ರಶ್ಮಿ , ಕಿರಣ

3)   ಯಜ್ಞದ ಪುರೋಹಿತ, ಋತ್ವಿಕ್ಕು

 

1) ಒಂದು ಧಾರ್ಮಿಕ ಸಂಸ್ಕಾರ, ಸುಲೋಚನ 

2)  ಕೀಳು ಜಾತಿಯವನು

3)   ಯೋಗ್ಯ,ಅರ್ಹ

 
 

1) ಮನವೊಲಿಸು, ಪ್ರೇರೇಪಿಸು 

2)  ಶುಭ, ಮಂಗಳ ಕಾರ್ಯ, ಉಡುಗೊರೆ

3)   ಮೃತ್ಯು ಪತ್ರ, ಸೆಳೆವು, ಸೆಳವುಳ್ಳ ನೀರಿನ ಪ್ರವಾಹ

 
 

1) ವಿಷ್ಣುವಿನ ಹೆಸರು, ಬ್ರಹ್ಮನ ತಂದೆ 

2)  ಚಿಗುರು ,ಪಲ್ಲವ 

3)  ಮುಖ್ಯ , ಪ್ರಧಾನವಾದ,ಕೀಟಳೆ ಸ್ವಭಾವದ.

 

H

1) ಗೆಲುವು ಮಾತನಾಡುವ ನಿಯತಕಾಲಿಕ ,ಯಶಸ್ಸಿನ ಮಾತು. 

2) ಶಕ್ತಿ ,ಕಾಂತಿ  ,ಹೊಳಪು , ಕಾವ್ಯದ ಶಬ್ದ ಗುಣಗಳಲ್ಲಿ ಒಂದು.

3) ಸ್ವದೇಶದಲ್ಲಿ ಹುಟ್ಟಿ ಬೆಳೆದವ, ದೇಶೀಯ.

I

1) ಈ ಕರ್ಣ ಚಾಡಿ ಮಾತಿಗೆ ಒಲಿಯುತ್ತಾನಾ?

2) ಸಹಾಯ, ಬೆಂಬಲ 

3) ಬೆರಗುಗೊಂಡ ,ವಿಸ್ಮಿತಗೊಂಡ, ಗಾಬರಿಗೊಂಡ.

J

1) ಮಂಕ ,ದಡ್ಡ, ತಿಳಿಗೇಡಿ. 

2) ಸಮ್ಮತಿ, ಅನುಮೋದನೆ .

3) ಬಿಟ್ಟಿ,ಉಚಿತ, ವ್ಯರ್ಥ.

K

1) ಮನವಿ ಪತ್ರ, ಸನ್ಮಾನ ಪತ್ರ. 

2) ಅಧಿಕಾರ ಪತ್ರ, ರಾಯಸ ,ನಿರೂಪ. 

3) ಹೊಸ ಆಕ್ಕಿ ,ಕೊಡಗಿನ ಸುಗ್ಗಿ ಹಬ್ಬ.

L

1) ಭೂಮಿಯ ಮಗ, ಒಂದು ಗ್ರಹ. 

2) ಈ ಲೋಕಕ್ಕೆ ಸಂಬಂಧಿಸಿದ್ದು, ಭೌತಿಕವಾದ.

3) ರೇಗು , ಸಿಟ್ಟಿಗೇಳು, ಕೋಪ.

ಈ ಎಲ್ಲ ಪದಬಂಧಗಳನ್ನು ಡಾಕ್ಟರ್ ಚಂದ್ರಶೇಖರ್ ರಾವ್ ಅವರು ಈ ಸ್ಪರ್ಧೆಗಾಗಿ ಕಳಿಸಿದ್ದಾರೆ ಅವರಿಗೆ ಬಹಳ ಧನ್ಯವಾದಗಳು 

ಯಾರು ಮೊದಲು ಅಷ್ಟುಪದಬಂಧಗಳನ್ನು ಸರಿಯಾಗಿ ಮಾಡಿ ಕಳಿಸುತ್ತಾರೋ ಅವರಿಗೆ ಡಾ. ಚಂದ್ರಶೇಖರ್ ರಾವ್ ಅವರ ಕಡೆಯಿಂದ ಒಂದು ವಿಶೇಷ ಬಹುಮಾನ ಸಿಗುತ್ತದೆ 

ಸೂಚನೆಗಳು :

1)  ನೀವು ಪ್ರಶ್ನೆಗಳನ್ನು ಬರೆದು ಕಳಿಸಬೇಡಿ ಬರೇ ಪದಬಂಧಗಳು ಅಂದರೆ ಎ ಬಿ ಸಿ ಇತರ ಬರೆದು ಅದರ ಚಿತ್ರಗಳಲ್ಲಿ ತುಂಬಿ , ಎರಡೆರಡು ಒಂದರ ಕೆಳಗೊಂದು ಬರೆದು, ಒಂದು ಸಲಕ್ಕೆ ಮೊಬೈಲ್ ನಲ್ಲಿ ಎರಡು ಬರುವಂತೆ ಫೋಟೋ ತೆಗೆದು ಅಂದರೆ ನೀವು 12 ಅನ್ನು ಕಳಿಸಿದರೆ ಆರು ಫೋಟೋ ತೆಗೆದು ನನಗೆ ಕಳಿಸಿ.

2) ಒಂದೊಂದು ದಿನ ಒಂದೊಂದು ಫೋಟೋ ಕಳಿಸಬೇಡಿ ಎಲ್ಲವೂ ಪೂರ್ತಿಯಾದ ಮೇಲೆ ಒಂದೇ ಸಲ ಆರು ಫೋಟೋ ಕಳಿಸಿ ಏಕೆಂದರೆ ಬಹಳ ಜನಗಳು ಕಳಿಸುತ್ತಿರುವುದರಿಂದ ತುಂಬಾ ಗೊಂದಲ ಉಂಟಾಗುತ್ತದೆ

3) ಅಲ್ಲದೆ, ಒಬ್ಬರಿಗೆ ಒಂದು ಸಲ ಕಳಿಸಿದ ಮೇಲೆ ಪುನಃ ಅದನ್ನು ತಿದ್ದಿ ಮತ್ತೊಂದು ಸಲ ಕಳಿಸುವ ಅವಕಾಶವಿರುವುದಿಲ್ಲ ಆದ್ದರಿಂದ ಸರಿಯಾಗಿ ಪರಿಶೀಲಿಸಿ ಒಂದೇ ಸಲ ಎರಡೆರಡು ಪದಬಂದ ಬರುವಂತೆ ಆರು ಫೋಟೋ ತೆಗೆದು ನನ್ನ ಇಮೇಲ್ jayarambox@gmail.com ಗೆ ಕಳಿಸಿ . ಹಾಗೆ ಮಾಡಲು ಬಾರದಿದ್ದವರು ವಾಟ್ಸಪ್ ಗೆ ಕಳಿಸಿರಿ

ಪ್ರಯತ್ನಿಸಿ . ಒಬ್ಬರಿಗೇ , ಸ್ಪರ್ಧೆಯ ಬಹುಮಾನ , ಹಾಗೂ ಡಾ || ಚಂದ್ರಶೇಖರ ರಾವ್ ಅವರ ವಿಶೇಷ ಬಹುಮಾನಗಳೆರಡೂ ಸಿಗುವ ಸಾಧ್ಯತೆಯೂ ಇದೆ!

ಮುದ್ದು ಮಕ್ಕಳ ಮುಗ್ಧ ಮನ- ಕೊನೆಯ ಭಾಗ 

ಮೈಸೂರು ಪಾಕ್ : ಡಾ || ಎ ಎಸ್ ಚಂದ್ರಶೇಖರ ರಾವ್ 

ನನ್ನ ಮೊಮ್ಮಗ ರೋಹನ್ಗೆ ಆಗ  8 ವರ್ಷ ವಯಸ್ಸು ಒಂದು ದಿನ ಮೈಸೂರುಪಾಕ್ ತಂದು ಚೂರು ಚೂರು ಮಾಡಿ ಒಂದು ತುಂಡು ಅವನಿಗೆ ಕೊಟ್ಟೆ ಅವನು ಒಂದು ರೊಟ್ಟಿನ ಡಬ್ಬದಲ್ಲಿಟ್ಟು ಸ್ಕೂಲಿಂದ ಬಂದ ಮೇಲೆ ತಿನ್ನುತ್ತೇನೆ ಎಂದು ಸ್ಕೂಲಿಗೆ ಹೋದ ಬಂದಮೇಲೆ ರೊಟ್ಟಿನ ಡಬ್ಬ ತೆಗೆದುಕೊಂಡು ಹೋದ ಸ್ವಲ್ಪ ಸಮಯದ ನಂತರ ಸಪ್ಪೆ ಮುಖ ಹಾಕಿಕೊಂಡು ಬಂದ ಯಾಕಪ್ಪ ಅಂದೆ ಲತಾ ಮೈಸೂರು ತುಂಬಾ ಇರುವೆ ಇತ್ತು ನಲ್ಲಿ ಕೆಳಗೆ ಇಟ್ಟು ನೀರು ಬಿಟ್ಟೆ. ಇರುವೆ ಹೋಯಿತು ಜೊತೆಗೆ ಮೈಸೂರ್ ಪಾಕು ಕರಗಿ ಹೋಯಿತು ಎಂದ ಅವನ ಮುಗ್ದೊತ್ತಿಗೆ ಬೆರಗಾದೆ ಬೇರೆ ಮೈಸೂರ್ ಪಾಕ್ ತುಂಡು ಕೊಟ್ಟು ಸಮಾಧಾನಪಡಿಸಿದೆ 

ಇದರೊಂದಿಗೆ ಈ ಅಂಕಣದ ಲೇಖನ ಮುಕ್ತಾಯವಾಯಿತು . ಓದುಗರಿಗೆ ಧನ್ಯವಾದಗಳು

 

 ಕವನ ಪೂರ್ತಿಗೊಳಿಸಿ 

ಅನೇಕ ಜನರಿಗೆ ಕವನ ಬರೆವ ಆಸಕ್ತಿ ಇರುವುದರಿಂದ, ಈ ಕೆಳಗಿನ ಸ್ಪರ್ಧೆ. ನಾನೇ ಒಂದು ಚಿಕ್ಕ ಕವನವನ್ನು ಸ್ವಲ್ಪ ಬರೆದು ನಿಲ್ಲಿಸಿದ್ದೇನೆ . ನೀವು ಪೂರ್ತಿಗೊಳಿಸಬೇಕು . ಕವನದ ಶಕ್ತಿಯನ್ನುನೋಡಿ . 8 ಸಾಲಿನಲ್ಲಿ ಒಂದು ಸಣ್ಣ ಕಥೆಯೇ ಇದೆ ! ನೀವು ಹಾಗೇಯೇ  ತೂಕವಿರುವ ಸಾಲುಗಳನ್ನು ಬರೆಯಬೇಕು. 

ನಾ ಸಂಜೆ ಮನೆಗೆ ನಡೆದು ಸಾಗಿ

ಏಕೋ ಏನೋ ಕರೆಂಟು ಹೋಗಿ |

ಮನೆಗೆ ನಡೆವ ಹಾದಿ ಕತ್ತಲಾಗಿ

ಮೋಬೈಲ್ ದೀಪ ನಾ ಬೆಳಗಿ ||

ಮಬ್ಬು ಬೆಳಕಿನಲ್ಲಿ ಸ್ವಲ್ಪ ದೂರಕೆ 

ವೃದ್ಧ ವ್ಯಕ್ತಿಯ ಅಸ್ಪಷ್ಟ ಇರುವಿಕೆ |

ಮುಂದೆ ಹೋಗಿ ನೋಡಲೇ?

ಅವರ ಮನೆಗೆ ಬಿಟ್ಟುಬರಲೇ? ||

....

1) ನೀವು ಇಲ್ಲಿರುವ ಸಾಲುಗಳು ಮತ್ತೆ ಬರೆಯದೆ, ಅದರ ಮುಂದಿನ ಸಾಲುಗಳನ್ನು ಸೊಗಸಾಗಿ ಬರೆದು ಕಳಿಸಿ.

2) ಮುಂದಕ್ಕೆ ಸುಮಾರು 16 ಸಾಲು, ಎಂದರೆ ನಾಲ್ಕು  ನುಡಿಗಳು ಬರೆಯಿರಿ.

ಲೇಖನ , ಕವನ ಇತ್ಯಾದಿ 

ಲೇಖನ : " ನಂಬಿಕೆ "  : ಡಾ || ಎ ಎಸ್ ಚಂದ್ರಶೇಖರ ರಾವ್ 

ಜೀವನದ ಮೌಲ್ಯಗಳಲ್ಲಿ ನಂಬಿಕೆ ಒಂದು ಮುಖ್ಯವಾದ ಮೌಲ್ಯ. ದಾಸರು ಹಾಡಿದ್ದರು, 'ನಂಬಿ ಕೆಟ್ಟವರಿಲ್ಲವೋ ರಂಗಯ್ಯನ' ಅಂತ. ಅಂದರೆ ದೇವರನ್ನು ನಂಬಿದವರಿಗೆ ಏನೂ ಕೆಡುಕು ಆಗುವುದಿಲ್ಲ ಅಂತ ಅವರು ನಂಬಿದ್ದರು. ಜೀವನದಲ್ಲಿ ನಂಬಿಕೆ ಇಲ್ಲದೆ ಬದುಕಲು ಸಾಧ್ಯವಿಲ್ಲ. ಹಲವಾರು ಜನರನ್ನು ನಂಬಿಯೇ ಜೀವನ ನಡೆಸಲು ಸಾಧ್ಯ.

ಪತಿ ಪತ್ನಿಯರಲ್ಲಿ ನಂಬಿಕೆ ಇರಬೇಕು. ಇಲ್ಲದಿದ್ದರೆ ಬದುಕು ಅಸಾಧ್ಯ. ಹಾಗೆಯೇ ತಂದೆತಾಯಿ ಮಕ್ಕಳಲ್ಲಿಯೂ ನಂಬಿಕೆ ಇಡಬೇಕು. ದೇವರಲ್ಲಿ ಬರೀ ನಂಬಿಕೆ ಇದ್ದರೆ ಸಾಲದು. ಮನುಷ್ಯ ಪ್ರಯತ್ನವೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ದೇವಸ್ಥಾನಗಳಲ್ಲಿ ಬಂದು ದೇವರ ದರ್ಶನ ಸೇವೆ ಮಾಡುತ್ತಾರೆ. ಆದರೆ ಇಷ್ಟೇ ಸಾಲದು. ಅವರು ಮನುಷ್ಯಪ್ರಯತ್ನವೂ ಮಾಡಲೇಬೇಕು. ಏನೂ ಓದದೆ ಪರೀಕ್ಷೆಯಲ್ಲಿ ತೇರ್ಗಡೆ ಮಾಡುವಂತೆ ಭಗವಂತನಲ್ಲಿ ಮೊರೆ ಇಟ್ಟರೆ ಸಾಲದು. ತಮ್ಮ ಪ್ರಯತ್ನ ಪೂರ್ಣವಾಗಿ ಮಾಡಿ ನಂತರ ದೇವರಿಗೆ ಮೊರೆ ಇಟ್ಟರೆ ಸಾರ್ಥಕವಾಗುತ್ತದೆ. ಯೋಗವಾಸಿಷ್ಠದಲ್ಲಿ ವಸಿಷ್ಠರು ಶ್ರೀರಾಮನಿಗೆ ಬೋಧಿಸಿದ್ದೂ ಇದನ್ನೇ. ಮನುಷ್ಯ ಪ್ರಯತ್ನಕ್ಕೆ ಅವರು ಪ್ರಾಮುಖ್ಯತೆ ಕೊಟ್ಟು ಬೋಧಿಸಿದರು. ಅದೂ ಅಲ್ಲದೆ ಅವರು ಮನುಷ್ಯ ಪ್ರಯತ್ನವೇ ದೇವರು ಎಂದೂ ತಿಳಿಸಿದರು.

ಸ್ನೇಹಿತರಲ್ಲಿರುವ ನಂಬಿಕೆ ಸಹ ಪವಿತ್ರವಾದದ್ದು. ಎಷ್ಟೋ ಜನರು ಸ್ನೇಹಕ್ಕೋಸ್ಕರ ತ್ಯಾಗಗಳನ್ನೂ ಮಾಡುತ್ತಾರೆ. ನಂಬಿಕೆಗೆ ಅರ್ಹರಾದ ಗೆಳೆಯರನ್ನು ಪಡೆಯುವುದೂ ಸಹ ದೈವದತ್ತವಾದದ್ದು. ಅಂತೆಯೇ ವೈದ್ಯರಲ್ಲಿಯ ನಂಬಿಕೆ, ರೋಗಿಯು ತನ್ನ ಪ್ರಾಣವನ್ನೇ ವೈದ್ಯರಿಗೆ ಕೊಟ್ಟು ಅವರು ಖಾಯಿಲೆ ವಾಸಿಮಾಡುತ್ತಾರಂತ ಅಚಲವಾಗಿ ನಂಬಿರುತ್ತಾರೆ. ಅವರಲ್ಲಿ ನಂಬಿಕೆ ಇಲ್ಲದಿದ್ದರೆ ಖಾಯಿಲೆ ವಾಸಿಯಾಗುವುದೇ ಇಲ್ಲ.

ನಂಬಿಕೆಯ ಇನ್ನೊಂದು ಮುಖ ಮೂಢನಂಬಿಕೆ. ಇದರಲ್ಲಿ ಅನೇಕ ಜನ ಮೋಸಹೋಗುತ್ತಾರೆ. ದೇವರ ಹೆಸರಿನಲ್ಲಿ ಇಂತಹ ಮೂಢನಂಬಿಕೆಗಳನ್ನು ಸೃಷ್ಟಿಸಿ ಜನರನ್ನು ಮೋಸಮಾಡುವವರೇ ಹೆಚ್ಚು. ಮೂಕಪ್ರಾಣಿಗಳನ್ನು ಬಲಿಕೊಡುವುದೂ ಉಂಟು. ವೈಜ್ಞಾನಿಕ ರೀತಿಯಲ್ಲಿ ವಾಸಿಮಾಡತಕ್ಕ ಅನೇಕ ಖಾಯಿಲೆಗಳನ್ನು ಈ ರೀತಿಯ ಮೂಢನಂಬಿಕೆಗಳನ್ನು ಆಚರಿಸಿ ಅನೇಕರು ಇದಕ್ಕೆ ಬಲಿಯಾಗಿದ್ದಾರೆ. ದೆವ್ವ ಭೂತಗಳು ಇವೆ ಎಂದು ನಂಬಿ ಅನೇಕರು ಮೋಸ ಹೋಗಿದ್ದಾರೆ. ಇಂತಹ ಮೂಢನಂಬಿಕೆಗಳನ್ನು ವೈಜ್ಞಾನಿಕ ರೀತಿಯಿಂದ ವಿಶ್ಲೇಷಿಸಿ ಅವುಗಳನ್ನು ಬಿಡಬೇಕು.

ನಂಬಿಕೆ ಜೀವನಾಧಾರ, ತಳಪಾಯ. ನಂಬಿಕೆ ಇಲ್ಲದಿದ್ದರೆ ಬದುಕು ಮಾಡಲು ಸಾಧ್ಯವಿಲ್ಲ.

 
 

ಲೇಖನ - “ಜುಲೈ ಜ್ಯೋತಿ – ಆರೋಗ್ಯ, ಸೌಹಾರ್ದತೆ ಮತ್ತು ಜಾಗೃತಿಯ ದೀಪ”

 ಎಸ್. ಸುರೇಶ್, ಪರಿಸರ ಸಲಹೆಗಾರ ಮತ್ತು ಆತ್ಮಚಿಂತಕ

‘ಜ್ಯೋತಿ’ ಎಂಬ ಪದವು ಆಂತರಿಕ ಬೆಳಕು, ಬುದ್ಧಿವಂತಿಕೆ ಮತ್ತು ಮಾರ್ಗದರ್ಶನವನ್ನು ಸೂಚಿಸುತ್ತದೆ. ಜುಲೈ 2025 ಮಾಸವು ಈ ಆಳವಾದ ಅರ್ಥವನ್ನು ನಾಲ್ಕು ಪ್ರಮುಖ ಮೌಲ್ಯಗಳ ಮೂಲಕ ಪ್ರತಿದಿನವೂ ಬೆಳಗಿಸುತ್ತದೆ – ಆರೋಗ್ಯ, ಸೌಹಾರ್ದತೆ, ಜಾಗೃತಿ ಮತ್ತು ಮಾನವೀಯತೆ.

ಈ ತಿಂಗಳಲ್ಲಿ ಆಚರಿಸಲ್ಪಡುವ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳು ನಮ್ಮ ದೈನಂದಿನ ಜೀವನದಲ್ಲಿ ಕರ್ತವ್ಯಪರತೆಯ ಅರಿವು ಮೂಡಿಸುತ್ತವೆ. ಮಾನಸಿಕ ಮತ್ತು ಶಾರೀರಿಕ ಆರೋಗ್ಯದ ಸಮತೋಲನ, ಸಾಮಾಜಿಕ ಸಂಬಂಧಗಳು, ಪ್ರಕೃತಿ ಸಂರಕ್ಷಣೆ ಮತ್ತು ಶಿಕ್ಷಣದ ಮಹತ್ವ ಈ ವಿಶೇಷ ದಿನಗಳಲ್ಲಿ ಸ್ಪಷ್ಟವಾಗಿ ಪ್ರತಿಫಲಿಸುತ್ತವೆ.

“ಆರೋಗ್ಯ – ದೇಹ ಮತ್ತು ಮನಸ್ಸಿನ ಆರೈಕೆ”

ಜುಲೈ 1

Doctors’ Day – ವೈದ್ಯಕೀಯ ಸೇವೆಗೆ ಗೌರವ

Chartered Accountants Day – ಆರ್ಥಿಕ ಶಿಸ್ತಿಗೆ ಪ್ರಶಂಸೆ

Postal Workers Day – ಸಂಪರ್ಕ ಸೇವೆಗೆ ಕೃತಜ್ಞತೆ

ಜುಲೈ 6

World Zoonoses Day – ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಕುರಿತು ಜಾಗೃತಿ

ಜುಲೈ 28

World Hepatitis Day – ಲಿವರ್ ಆರೋಗ್ಯದ ಕುರಿತು ಜನಜಾಗೃತಿ

Nature Conservation Day – ನೈಸರ್ಗಿಕ ಸಂಪತ್ತಿನ ಸಂರಕ್ಷಣೆ

“ ಆರೋಗ್ಯವಿಲ್ಲದೇ ಜೀವನವಿಲ್ಲ – ಜುಲೈ ಹಂತವಾಗಿ ಆರೈಕೆಯ ಕರ್ತವ್ಯ”

“ಸೌಹಾರ್ದತೆ – ಸಂಬಂಧಗಳ ಸಂಭ್ರಮ”

ಜುಲೈ 2

World UFO Day – ವಿಜ್ಞಾನಚಿಂತನದ ಪ್ರೇರಣೆ

ಜುಲೈ 7

Forgiveness Day – ಕ್ಷಮೆಯ ಶಕ್ತಿ

Chocolate Day – ಸಿಹಿಯ ನೆನಪು

ಜುಲೈ 10

Guru Purnima – ಗುರುಗಳಿಗೆ ನಮನ

ಜುಲೈ 17

International Justice Day – ನ್ಯಾಯದ ಮೌಲ್ಯಗಳು

World Emoji Day – ಭಾವನಾತ್ಮಕ ಸಂಬಂಧಗಳ ಪ್ರತೀಕ

ಜುಲೈ 18

Nelson Mandela International Day – ಸಮಾನತೆ ಮತ್ತು ಶಾಂತಿಯ ಸಂದೇಶ

ಜುಲೈ 20

International Chess Day – ತಾಳ್ಮೆಯ ಕಲಿಕೆ

Moon Day – ವಿಜ್ಞಾನ ಸಾಧನೆಗಳ ಸ್ಮರಣೆ

ಜುಲೈ 22

Pi Approximation Day – ಗಣಿತದ ಸೌಂದರ್ಯ

Mango Day – ಹಣ್ಣುಗಳ ಸಿಹಿ ಸಂಭ್ರಮ

 

ಜುಲೈ 23

National Broadcasting Day – ಮಾಹಿತಿ ಹರಡುವಿಕೆ

Birth Anniversary of Chandra Shekhar Azad – ಸ್ವಾತಂತ್ರ್ಯದ ಸ್ಮರಣೆ

ಜುಲೈ 30

Friendship Day – ಸ್ನೇಹದ ಮೌಲ್ಯ

World Day Against Trafficking in Persons – ಮಾನವೀಯ ಹಕ್ಕುಗಳ ರಕ್ಷಣೆ

 “ಸ್ನೇಹ, ಗುರು, ನ್ಯಾಯ – ಸೌಹಾರ್ದತೆಯ ಮೂಲಸ್ತಂಭಗಳು”

“ಜಾಗೃತಿ – ಪರಿಸರ, ನ್ಯಾಯ, ಶಿಕ್ಷಣ”

ಜುಲೈ 1

International Day of Cooperatives – ಸಹಕಾರದ ಶಕ್ತಿ

ಜುಲೈ 11

World Population Day – ಜನಸಂಖ್ಯಾ ಸಮತೋಲನದ ಜಾಗೃತಿ

ಜುಲೈ 12

Malala Day – ಬಾಲಕಿಯರ ಶಿಕ್ಷಣಕ್ಕೆ ಧ್ವನಿ

ಜುಲೈ 26

Kargil Vijay Diwas – ಯೋಧರ ಶೌರ್ಯಕ್ಕೆ ಗೌರವ

ಜುಲೈ 29

International Tiger Day – ಹುಲಿ ಸಂರಕ್ಷಣೆ ಮತ್ತು ಅರಣ್ಯ ಸಂರಕ್ಷಣೆಯ ಅಗತ್ಯ

“ ಪ್ರಕೃತಿಯ ಹಿತವೇ ನಿಜವಾದ ಜಾಗೃತಿ”

 

ಕವನ -ದೇಶವೇ ನಮ್ಮ ತಾಯಿ :  ಶ್ರೀಮತಿ ಸೌಮ್ಯ ನಾಗರಾಜ್ 

ನನ್ನ ಪೂಜ್ಯ ಭಾರತ ಮಾತೆಯೆ🙏🙏

ತಾಯಂದಿರ ದಿನದ ಶುಭಾಶಯ ನಿನಗೆ 🙏🙏

ನಿನ್ನ ಒಡಲಲಿ ಜನಿಸಿದ ಮಕ್ಕಳ ರಕ್ಷಿಸು

ನಿನಗಾಗಿ ಜೀವ ತೆತ್ತವರ ಹರಸು

ನಿನ್ನ ಮಮತೆಯನರಿಯದೆ ನಿನ್ನ ತ್ಯಜಿಸಿ ದೂರ ಹೋದವರ ಕ್ಷಮಿಸು,

ನಿನ್ನ ಒಡಲಾಳದ ನೋವನಾರಿಸಲು ಜನಿಸಿದ  ನರೇಂದ್ರರಂತಹ ನಿನ್ನನೇಕ ಮಕ್ಕಳಿಗೆ ನಿನ್ನ ಶತೃಗಳ ಹೊಸಕುವ ರಜೋಬಲವ ಹೆಚ್ಚಿಸು,

ನಿನ್ನ ಅನಾದಿ ಕಾಲದ ಸೌಂದರ್ಯ, ನಿನ್ನ ಗರ್ಭದಿ ಹುದುಗಿರುವ ಐಶ್ವರ್ಯವ, ನಿನ್ನ ಮಕ್ಕಳ ಬುದ್ಧಿಮತ್ತೆ, ಜ್ಞಾನ ಭಂಡಾರವ ನೋಡಿ ಕರುಬುವವರಿಗೆ ನೀ ಸುಮತಿಯ ನೀಡು. 

ನಿನ್ನ ಒಡಲಲಿ ಜನಿಸಿ ನಿನ್ನ ಮಡಿಲಲಿ ಆಡಿ ಬೆಳೆದು ಹೊರಗಿನವರ ಕುಬುದ್ಧಿಗೆ ಬಲಿಯಾಗಿರುವವರ ಕ್ಷಮಿಸಿ ಉದ್ಧರಿಸು,

ಜಾತಿ ಮತ, ಮೇಲು ಕೀಳುಗಳ ವಿಷವರ್ತುಲದಲಿ ಬೆಂದು ನಿನ್ನನೇ ಹಂಚಿ ಹರಿದು ವಿಭಜಿಸುತ್ತಿರುವ ನಿನ್ನ ಮಕ್ಕಳಿಗೆ ನೀಡು ವಾಸ್ತವದ ತಿಳುವಳಿಕೆ 

ನಿನ್ನ ಸಾಂತ್ವನದ, ತಾಳ್ಮೆಯ ಅರಿವು ಮೂಡಲಿ ಜನತೆಗೆ

ಮತ್ತೆ ಒಟ್ಟಾಗಿ ಬಾಳುವ ಜೀವನದ ಜೇನಿನ ಸವಿಯನುಣಿಸು ತಾಯೆ 

ಮತ್ತೆ ಸತ್ವ ಕ್ಷಾತ್ರ ತೇಜಸ್ಸುಗಳ ನೆಲೆಯಾಗಲಿ ಈ ನೆಲ. 

ಮತ್ತೆ ನೆಲೆಸಲಿ ಶಾಂತಿ ಸೌಹಾರ್ದಗಳು ನಿನ್ನ ನೆಲದಲಿ,

ಮತ್ತೆ ಮೆರೆಯಲಿ ಆಧ್ಯಾತ್ಮದ ಪಾಠಶಾಲೆಯಾಗಿ ಈ ನಿನ್ನ ಪವಿತ್ರ ಮಡಿಲು,

ಹರಸು ತಾಯೇ ನಿನ್ನ ಮಕ್ಕಳ ಮತ್ತೆ ಪಡೆಯಲು ಭರತ ಭೂಮಿಯ,

ವಿಶ್ವ ತಾಯಂದಿರ ದಿನದ ಕೋಟಿ ನಮನಗಳು ತಾಯಿ ನಿನಗೆ,

ಆಶೀರ್ವದಿಸು ನನ್ನಮ್ಮ ನಮ್ಮನು🙏🙏🙏

 
 

ಕವನ -ಎಳೆ ಗರಿಕೆ  : ರಚನೆ : ಶ್ರೀಮತಿ ಲತಾ ಶಿವಕುಮಾರ್

ಧರಣಿಯೊಡಲ ಹಸಿ ಆರದ

ಪ್ರೀತಿ ಪಡೆದ ಗರಿಕೆಯ ಬೇರು

ಹಸಿರಾಗಿ ಚಿಗುರಿ ನಳನಳಿಸಿ

ನಿಂತ ಹಾಗೆ...

ತಣ್ಣಗೆ ಬೀಸುವ ತಂಗಾಳಿಯು

ಮೃದುವಾಗಿ ಸ್ಪರ್ಶಿಸಿ

ಮನಕೆ ಮುದ ಕೊಡುವ

ನೆನಪಿನ ಸಿಂಚನ...

ಎಳೆ ಗರಿಕೆಯ  ಮೇಲೆ ಇಬ್ಬನಿಯ

ಹನಿಯ ಮೂಡಿಸಿ

ಆಕ್ಕರೆಯ ಅಪ್ಪುಗೆಯ 

ನೀಡಿದೆ...

 
 
 

ಕವನ -ಭಾನುವಾರದ ಭಾವನೆ   : ರಚನೆ : ಶ್ರೀಮತಿ ಲತಾ ಶಿವಕುಮಾರ್

ನಾನು ಟ್ವಿಟ್ಟರ್ ನಲ್ಲಿ,  

"ಭಾನುವಾರದ 

ಭಾವನೆಗಳಿಗೆ

ಬಣ್ಣತುಂಬುವ

ಬರಹಗಳನ್ನು

ಬರೆಯಿರಿ "

ಎಂದು ಕಳಿಸಿದ ಕೆಲವೇ ನಿಮಿಷದಲ್ಲಿ ಶ್ರೀಮತಿ ಲತಾ ಶಿವಕುಮಾರ್ ಅವರು ಈ ಕವನ ಬರೆದು ಚಿತ್ರದ ಜೊತೆ ಕಳಿಸಿದರು ! - ಜಯರಾಂ ಎ ಎಸ್ 

ಭಾವನೆಗಳಿಗೆ

ಬಣ್ಣ ತುಂಬುವ

ಭರದಲ್ಲಿ ಮುಂದಿನ

ಬದುಕು

ಭಾರವಾಗದಿರಲಿ

ಬಣ್ಣದ ರಂಗೊಲಿಯಂತೆ ಬದುಕು

ಭಾವನೆ ತುಂಬಿದ ಅಂಗಳವಾಗಲಿ

ಭುಗಿಲೆದ್ದ ಆಸೆಯ ಬಳ್ಳಿಗೆ ಅಸರೆಯಾಗಲಿ

ಬರಡಾಗದಿರಲಿ ಎಂದಿಗೂ

ಬದುಕು ದುರಾಸೆಯ ಸುಳಿಗೆ

ಬದುಕು ಬಂದ ಹಾಗೆ ಸ್ವೀಕರಿಸಿ ಭಾವಜೀವಿಗಳಾಗಿ

ಬದುಕಿ ಅನ್ಯರಿಗೆ ಮಾರ್ಗದರ್ಶಕರಾಗೋಣ

 
 

 ಲೇಖನ :ಉದ್ಯೋಗ ಹುಡುಕುವುದು - ಅವರದೇ ಅನುಭವ ಸಹಿತ  - ಶ್ರೀ ಪ್ರದೀಪ್ ರೈ 

ಜೀವನದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಉದ್ಯೋಗವನ್ನು ಹುಡುಕುವುದು ಅತ್ಯಂತ ಅಗತ್ಯ. ಇಲ್ಲದಿದ್ದರೆ, ನಾವು ಬದುಕಿನ ಎಲ್ಲ ಹಂತದಲ್ಲೂ ಅಸಮಾಧಾನದಿಂದ ಎದುರಿಸಬೇಕಾಗುತ್ತದೆ. ಬಹುತೇಕ ಜನರು ಇಂಜಿನಿಯರಿಂಗ್, ಬಿಎಸ್‌ಸಿ, ಬಿಕಾಂ ಮುಂತಾದ ಪದವಿಗಳನ್ನು ಪಡೆದರೂ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಇದರ ಪ್ರಮುಖ ಕಾರಣ ಅಂದರೆ ಕೌಶಲ್ಯದ ಕೊರತೆ. ಶೈಕ್ಷಣಿಕ ಜೀವನದಲ್ಲಿಯೇ ನಾವು ಸರಿಯಾದ ದಿಕ್ಕಿನಲ್ಲಿ ಚಲಿಸದಿದ್ದರೆ, ಮುಂದಿನ ಹಂತದಲ್ಲಿ ನಾವು ಏನನ್ನೂ ಸಾಧಿಸದೆ ನಿಂತು ಹೋಗುತ್ತೇವೆ. ನಾನು ಕೂಡ ಈ ಸತ್ಯವನ್ನು ಅನುಭವಿಸಿದ್ದೇನೆ — ಇಂಜಿನಿಯರಿಂಗ್ ಮುಗಿಸಿದ್ದರೂ, ನನಗೆ ಬೇಕಾದಷ್ಟು ಕೌಶಲ್ಯಗಳು ಇರಲಿಲ್ಲ. ಅದರ ಪರಿಣಾಮವಾಗಿ ಅವಕಾಶಗಳನ್ನು ಕಳೆದುಕೊಂಡೆ ಮತ್ತು ಪ್ರಿಯವಿಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಯಿತು. ಆ ಕೆಲಸ ನನಗೆ ತೃಪ್ತಿ ಕೊಡಲಿಲ್ಲ, ನನ್ನ ಆಸಕ್ತಿಗೂ ಅದರಿಗೂ ಯಾವುದೇ ಸಂಪರ್ಕವಿರಲಿಲ್ಲ.

ಉದ್ಯೋಗದಲ್ಲಿ ಯಶಸ್ಸು ಸಿಕ್ಕಾಗ ಬಾಕಿ ಎಲ್ಲವೂ ಸರಿಯಾಗಿ ನಡೆಯುತ್ತದೆ. ಹಣ, ಗುರುತು, ಸಮಾಧಾನ ಎಲ್ಲವೂ ಉದ್ಯೋಗದೊಂದಿಗೆ ನೇರವಾಗಿ ಜೋಡಿಸಲ್ಪಟ್ಟಿವೆ. ಆಗ ನಾವು ನಮ್ಮ ಕುಟುಂಬಕ್ಕೂ, ಸಮಾಜಕ್ಕೂ ಪ್ರೇರಣೆಯಾದವರಾಗಿ ಬೆಳೆಯಬಹುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರವನ್ನೇ ಆರಿಸಿಕೊಂಡು ಅದರಲ್ಲಿ ಕೌಶಲ್ಯಗಳನ್ನು ರೂಪಿಸಬೇಕು. ಕೇವಲ ಪದವಿಯ ಮೇಲೆ ಅವಲಂಬನೆ ಇಟ್ಟುಕೊಳ್ಳುವುದು ಹೆಚ್ಚು ಫಲಕಾರಿಯಾಗುವುದಿಲ್ಲ. ಪ್ರಪಂಚದ ಹಾದಿ ಇಂದು ಸ್ಪರ್ಧಾತ್ಮಕವಾಗಿದೆ, ಇಲ್ಲಿ ಕೌಶಲ್ಯವೇ ನಿಜವಾದ ಶಕ್ತಿಯಾಗಿದೆ. ಬದುಕನ್ನು ಕಟ್ಟಿಕೊಳ್ಳುವುದು ನಮ್ಮ ಹೊಣೆ, ಅದಕ್ಕಾಗಿ ಸಮಯದಲ್ಲಿ ಜಾಣ್ಮೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಜೀವನದಲ್ಲಿ ಪ್ರತಿ ಹಂತವೂ ಮುಕ್ತಾಯವಲ್ಲ, ಹೊಸ ಪ್ರಾರಂಭ. ಆದರೆ ಆ ಪ್ರಾರಂಭದ ದಿಕ್ಕು ಸರಿಯಾಗಿರಬೇಕು. ಇಲ್ಲವಾದರೆ ನಾವು ನಮ್ಮ ಬದುಕಿನಲ್ಲಿ ಮಾತ್ರವಲ್ಲ, ನಮ್ಮ ಕನಸುಗಳಲ್ಲಿಯೂ ತಾನೇ ಸೋಲುತ್ತೇವೆ. ಒಳ್ಳೆಯ ಉದ್ಯೋಗವು ಕೇವಲ ಹಣವಲ್ಲ, ಅದು ನಮ್ಮ ಅಸ್ತಿತ್ವವನ್ನೂ ರೂಪಿಸುತ್ತದೆ.

ಮೇಲಿನ ಚಿತ್ರ ದಲ್ಲಿರುವ ಬೈಗುಳವನ್ನು ಓದಿ. ವಾಕಿಂಗ್ ಮುಗಿಸಿ ಬಂದ ಗಂಡನನ್ನು ಹೆಂಡತಿ ಹೀಗೇಕೆ ಬೈಯ್ಯುತ್ತಿದ್ದಾಳೆ? ಇದರ ಹಿಂದಿನ ಅರ್ಥ ತಿಳಿಸಿ .

ಸುಳಿವು : ಗಂಡನ ಮುಖದಲ್ಲಿ " ಅಯ್ಯೋ ,ಈ ಉಪಾಯವೂ ಇವಳಿಗೆ ಗೊತ್ತಾಯಿತೇ ?" ಎಂಬ ಭಾವನೆಯಿದೆ. 

ಸುದ್ದಿಗಳು 

ಜೂನ್ 18 ರಂದು , ವಿಡಿಯಾ ಬಡಾವಣೆಯಲ್ಲಿ ಅನೇಕ ಹೋಮ , ಹವನಗಳನ್ನು ಏರ್ಪಡಿಸಿದ್ದರು . ನಂತರ ಅಲ್ಲಿ ಮಹಾಪ್ರಸಾದವೂ ಇತ್ತು 

                     

ಜೂನ್ 22  ರಂದು , ಶ್ರೀ ಬ್ರಹ್ಮ ಚೈತನ್ಯ ಮಹಾರಾಜ ಅವರ ಗುರುವಂದನೇ ಕಾರ್ಯಕ್ರಮವನ್ನು , ಎನ್ ಆರ್ ಕಾಲೋನಿಯ ಶ್ರೀ ಕಾರಂಜಿ ಅಂಜನೇಯನ ನೇವಸ್ಥಾನದ ಆವರಣದಲ್ಲಿ , ಶ್ರೀ ಸುಂದರ ರಾವ್ ಅವರು ಏರ್ಪಡಿಸಿದ್ದರು .



                           

ನಿಮ್ಮ ಪ್ರತಿಕ್ರಿಯೆಗಳು 

ಈ ಸಲದ ಅಭಿಪ್ರಾಯಗಳಲ್ಲಿ ಪತ್ರಿಕೆ ಯ ಬಗ್ಗೆ ಅಲ್ಲದೆ ಅದರ ಜೊತೆಗೆ ಕೆಲವರು ನನ್ನ ಬಗ್ಗೆಯೂ ಸ್ವಲ್ಪ ಬರೆದಿರುವುದರಿಂದ ಅದನ್ನು ಪ್ರಕಟಿಸಲಾಗಿದೆ.

1) ಶ್ರೀ ಪ್ರದೀಪ್ ರೈ 

ಇಡೀ ಸಮಾಜಕ್ಕೆ ಪ್ರೇರಣೆಯಾಗಿ ಬೆಳಗುವ ಕೆಲವು ವ್ಯಕ್ತಿಗಳು ತಮ್ಮ ನಿಷ್ಠೆ, ಪರಿಶ್ರಮ ಮತ್ತು ಮಾನವೀಯ ಮೌಲ್ಯಗಳಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಅವರು ಮಾಡುತ್ತಿರುವ ಪ್ರತಿಯೊಂದು ಕಾರ್ಯವೂ ಒಂದು ದೀಪದಂತೆ, ಇತರರ ಬದುಕಿಗೆ ಬೆಳಕು ನೀಡುತ್ತದೆ. ಇಂತಹದ್ದೇ ಒಂದು ಪ್ರಕಾಶಮಾನ ವ್ಯಕ್ತಿತ್ವವು ಜಯರಾಮ್ ಸರ್‌ರವರದು. ತಮ್ಮ ದಿನಚರ್ಯೆಯಲ್ಲಿ ಅವರು ಅದೆಷ್ಟೋ ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಜೀವನವನ್ನು ಸಾರ್ಥಕಗೊಳಿಸುತ್ತಿದ್ದಾರೆ. ಕಲೆ, ಛಾಯಾಗ್ರಹಣ, ಸಾಹಿತ್ಯ, ಲೇಖನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಪಾರ ನೈಪುಣ್ಯತೆ ಹೊಂದಿರುವ ಅವರು, ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಪ್ರಭಾವ ಬೀರುತ್ತಿದ್ದಾರೆ. ಅವರು ಕಿರಿಯ ವಯಸ್ಸಿನಿಂದಲೇ ತಮ್ಮ ನಾಯಕತ್ವ ಸಾಮರ್ಥ್ಯದಿಂದ ಗಮನ ಸೆಳೆದವರು. ಶ್ರೇಷ್ಠ ಶಿಕ್ಷಕರಾಗಿ, ಮಾರ್ಗದರ್ಶಕರಾಗಿ ಅನೇಕ ವಿದ್ಯಾರ್ಥಿಗಳಿಗೆ ದೀಪಬಳಕೆಯಾಗಿ, ಬದುಕಿಗೆ ನೂರು ಹೊಸ ದಿಕ್ಕುಗಳನ್ನು ತೋರಿಸಿದ್ದಾರೆ.

ಜ್ಞಾನ ಹಂಚಿಕೊಳ್ಳುವ ಉತ್ಸಾಹದಿಂದ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕ ಶಿಕ್ಷಣವನ್ನು ನವೀಕೃತ ಮಾಧ್ಯಮಗಳಲ್ಲಿ ಹರಡುತ್ತಿದ್ದಾರೆ. ಲೇಖನಗಳ ಮೂಲಕ ಅವರು ಜನಮನದಲ್ಲಿ ಚಿರಸ್ಥಾಯಿ ಪ್ರಭಾವ ಬೀರಿದ್ದಾರೆ. ಜೊತೆಗೆ ತಂತ್ರಜ್ಞಾನದಲ್ಲಿನ ಪರಿಣತಿಯು ಅವರ ಶಿಕ್ಷಣ ಪಾಠಗಳನ್ನು ಇನ್ನಷ್ಟು ಆಕರ್ಷಕ ಮತ್ತು ಪರಿಣಾಮಕಾರಿ ಮಾಡಿದೆ. ಸಮಾಜಮುಖಿ ಸೇವೆಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದು ಶ್ಲಾಘನೀಯವಾಗಿದೆ. ಅವರಲ್ಲಿರುವ ಮತ್ತೊಂದು ವಿಶಿಷ್ಟ ಪ್ರತಿಭೆ ಎಂದರೆ ತೋಟಗಾರಿಕೆ. ನೈಸರ್ಗಿಕ ಸೌಂದರ್ಯದ ಜೊತೆಗೆ ಹಸಿರು ಪ್ರಪಂಚವನ್ನು ಸೃಜಿಸುವಲ್ಲಿಯೂ ಅವರು ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ತಮ್ಮ ಮನೆಯಲ್ಲಿ, ಸಣ್ಣ ಜಾಗದಲ್ಲೇ ವಿವಿಧ ರೀತಿಯ ಸಸ್ಯಗಳನ್ನು ಬೆಳೆಸಿ, ಪ್ರತಿ ಬೆಳೆಗೆ ಪ್ರೀತಿ ಹಾಗೂ ಸಂಯಮದಿಂದ ಹತ್ತಿರವಾಗಿರುವ ಅವರು ಪ್ರಕೃತಿಯೊಂದಿಗೆ ಜೀವಿತವೊಂದನ್ನು ಕಟ್ಟಿಕೊಂಡಂತೆ ಬದುಕುತ್ತಿದ್ದಾರೆ. ಹೂವಿನ ಸೌಂದರ್ಯ, ಹಣ್ಣು-ಹಣ್ಣುಗಳ ಜೀವಂತತೆ—all are nurtured with his patient care and deep understanding of plants. ತೋಟಗಾರಿಕೆಯನ್ನು ಕೇವಲ ಹವ್ಯಾಸವಲ್ಲದೆ, ಅದು ಜೀವನದ ಒಂದು ಮೌಲ್ಯಪೂರ್ಣ ಭಾಗವನ್ನಾಗಿ ಮಾಡಿದವರು ಅವರು.

ಅವರ ಸಾತ್ವಿಕ ಸ್ವಭಾವ, ಸಹಾನುಭೂತಿಯ ಮನಸ್ಸು ಮತ್ತು ಸದಾ ಕಲಿಯುವ ಹಾಗೂ ಕಲಿಸೋ ಮನೋಭಾವ ಇವರೆಲ್ಲವೂ ಅವರನ್ನು ಇನ್ನಷ್ಟು ವಿಶಿಷ್ಟ ವ್ಯಕ್ತಿತ್ವವನ್ನಾಗಿ ಮಾಡಿವೆ. ತಮ್ಮ ಪರಿಶ್ರಮ, ಮಾನವೀಯ ಮೌಲ್ಯಗಳು ಮತ್ತು ನೈತಿಕ ಶಕ್ತಿಯಿಂದ ಅವರು ಇತರರಿಗೆ ಜೀವನ ಪಾಠವನ್ನು ಕಲಿಸುತ್ತಿದ್ದಾರೆ. ಇಂತಹ ನಿಷ್ಠಾವಂತ, ಬದ್ಧತೆಯೊಂದಿಗೆ ಬದುಕು ಸಾಗಿಸುತ್ತಿರುವ ವ್ಯಕ್ತಿಯು ಈ ಸಮಾಜದಲ್ಲಿ ಇರುವುದೇ ನಮ್ಮೆಲ್ಲರ ಪಾಲಿಗೆ ಹೆಮ್ಮೆ ಮತ್ತು ಧನ್ಯತೆ.

2) ಶ್ರೀ ಶ್ರೀನಿವಾಸ ಶೆಟ್ಟಿ 

ಜೂನ್ ಪತ್ರಿಕೆ ತುಂಬಾ ಚೆನ್ನಾಗಿ ಬಂದಿದೆ. ವ್ಯಕ್ತಿ ಪರಿಚಯ ಜಯರಾಮ್ ಅವರ ವಾಸ್ತುಶಿಲ್ಪದ ಸಾಧನೆಗಳನ್ನು ಚಿತ್ರಗಳೊಂದಿಗೆ ಚೆನ್ನಾಗಿ ಬರೆಯಲಾಗಿದೆ. ನಮ್ಮ ಬಡಾವಣೆಯ ದಂತವೈದ್ಯರಾದ ಶ್ರೀ ನಾಗೇಶ್ ಅವರನ್ನು ಮುಂಬರುವ ತಿಂಗಳಲ್ಲಿ ಇಲ್ಲಿ ಪರಿಚಯಿಸಬಹುದು. ಅವರು ಥಿಯೋಫಿಕಲ್ ಸೊಸೈಟಿಯ ಸದಸ್ಯರಾಗಿದ್ದಾರೆ ಮತ್ತು ಅವರ ಮನೆಯಲ್ಲಿ ನಿಯಮಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಅವರು ಉತ್ತಮ ಭಾಷಣಕಾರರೂ ಹೌದು.

3) ಶ್ರೀ ಸುರೇಶ್ ಎಸ್ 

🌞✨ *ಸೂರ್ಯ ಜಯರಾಮ – ಬೆಳಕು ಮತ್ತು ಜಯದ ಸಂಗಮ* ✨🌞

ಹೆಸರಿನ ಅರ್ಥ: S U R Y A J A Y A R A M A

🔥 ಸು — ಸೂರ್ಯ: ಬೆಳಕಿನ ಮತ್ತು ಪ್ರಜ್ಞೆಯ ಪ್ರತೀಕ

🎶 ರ್ಯ — ರಸಿಕ: ಸೊಗಸಿನ ಮತ್ತು ಸುವಾಸನೆಯ ಪ್ರೇಮಿ

🏆 ಜಯ — ಜಯ: ಗೆಲುವಿನ ಮತ್ತು ಸಾಧನೆಯ ಸಂಕೇತ

🎇 ರಾ — ರಾಮ: ಧೈರ್ಯ ಮತ್ತು ಕರುಣೆಯ ದೀಪ

💫 ಮಾ — ಮಾಯಾ: ಮನಸ್ಸು ಗೆಲ್ಲುವ ಮಾಯಾಜಾಲ

ನಿನ್ನಿಂದ ಕಲಿತ ಪಾಠಗಳು ಅನಂತ. 🌟 ಸೂರ್ಯ ಜಯರಾಮ ಎಂಬ ಹೆಸರಿನಲ್ಲಿ ನಿನ್ನ ಬೆಳಕು, ಜಯ, ಧೈರ್ಯ ಮತ್ತು ಪ್ರೀತಿ ಹೃದಯಗಳನ್ನು ಉಜ್ಜ್ವಲಗೊಳಿಸುವ ನಿಜವಾದ ಬೆಳಕು ಆಗಿರಲಿ.🙏🏻

4) ಶ್ರೀ ಎನ್ ವಾಸುದೇವ ರಾವ್ 

ಪತ್ರಿಕೆ ತುಂಬಾ ಚನ್ನಾಗಿ ಇದೆ. ಓದಿ ಸಂತೋಷ ವಾಯಿತು ಧನ್ಯವಾದಗಳು.

ಎಲ್ಲರಿಗೂ ಧನ್ಯವಾದಗಳು - ಜಯರಾಂ ಎ ಎಸ್ 

Comments

Popular posts from this blog

ಪ್ರತಿಭಾ ಪತ್ರಿಕೆ - ಡಿಸಂಬರ್ 2024

Magazine for talents - November 2024

Magazine for talents - December 2024